ನವದೆಹಲಿ: ಜ್ಞಾನವಾಪಿ ಮಸೀದಿಯ (Gyanvapi Mosque) ಆವರಣದಲ್ಲಿ ಪತ್ತೆಯಾಗಿದ್ದ ಶಿವಲಿಂಗ (Shivling) ರೂಪದ ಆಕೃತಿಯ ವೈಜ್ಞಾನಿಕ ಪರೀಕ್ಷೆ ಕೋರಿ ಹಿಂದೂಪರ ನಾಲ್ವರು ಮಹಿಳೆಯರು ಸಲ್ಲಿಸಿದ್ದ ಅರ್ಜಿಯನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯ (Varanasi Court) ವಜಾ ಮಾಡಿದೆ. ಸುಪ್ರೀಂ ಕೋರ್ಟ್ (Supreme Court) ಆದೇಶ ಹಿನ್ನಲೆ ಕಾರ್ಬನ್ ಡೇಟಿಂಗ್ ಪರೀಕ್ಷೆ ಸಾಧ್ಯವಿಲ್ಲ ಎಂದು ಹೇಳಿದೆ.
ಪ್ರಕರಣ ವಿಚಾರಣೆ ನಡೆಸಿದ್ದ ನ್ಯಾ. ಅಜಯ್ ಕೃಷ್ಣ ವಿಶ್ವೇಶಾ ಎರಡು ಬಾರಿ ಆದೇಶವನ್ನು ಮುಂದೂಡಿಸಿದ್ದರು. ಇಂದು ಆದೇಶ ಪ್ರಕಟಿಸಿದ ಅವರು ಮೇ 16 ರಂದು ಸುಪ್ರೀಂ ಕೋರ್ಟ್ ಶಿವಲಿಂಗ ಪತ್ತೆಯಾದ ಸ್ಥಳವನ್ನು ಸೀಲಿಂಗ್ ಮಾಡಲು ಆದೇಶಿಸಿದ್ದರಿಂದ ವೈಜ್ಞಾನಿಕ ತನಿಖೆಯ ಮನವಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಅದೇಶದಲ್ಲಿ ತಿಳಿಸಿದ್ದಾರೆ.

ಜ್ಞಾನವಾಪಿ ಮಸೀದಿಯ ಸರ್ವೇ ವೇಳೆ ವಝುಖಾನದಲ್ಲಿ ಶಿವಲಿಂಗ ಪತ್ತೆಯಾಗಿದೆ ಎನ್ನಲಾಗಿತ್ತು. ಈ ಶಿವಲಿಂಗ ರೂಪದ ಆಕೃತಿಯನ್ನು ವೈಜ್ಞಾನಿಕ ಪರೀಕ್ಷೆ ನಡೆಸಬೇಕು ಎಂದು ಮನವಿ ಮಾಡಲಾಗಿತ್ತು. ಈ ಅರ್ಜಿಯನ್ನು ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ವಿರೋಧಿಸಿತ್ತು.
ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಶಿವಲಿಂಗವು ಸೂಟ್ ಆಸ್ತಿಯ ಭಾಗವಾಗಿದೆಯೇ ಅಥವಾ ಇಲ್ಲವೇ? ಆಪಾದಿತ ರಚನೆಯ ‘ವೈಜ್ಞಾನಿಕ ತನಿಖೆ’ಗೆ ನಿರ್ದೇಶಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆಯೇ? ಎನ್ನುವ ಎರಡು ಪ್ರಶ್ನೆಗಳನ್ನು ಮುಂದಿಟ್ಟು ಮೊದಲು ಈ ಬಗ್ಗೆ ವಿಚಾರಣೆ ನಡೆಯಬೇಕು ಎಂದು ಮಸೀದಿ ಪರ ವಕೀಲರು ವಾದಿಸಿದ್ದರು.

ಇದಕ್ಕೆ ಪ್ರತಿವಾದ ಮಂಡಿಸಿದ್ದ ಹಿಂದೂ ಆರಾಧಕರ ಪರ ವಕೀಲ ವಿಷ್ಣು ಶಂಕರ್ ಜೈನ್, ಶಿವಲಿಂಗವು ಸೂಟ್ ಆಸ್ತಿಯ ಒಂದು ಭಾಗವಾಗಿದೆ. ಸಿವಿಲ್ ಪ್ರೊಸೀಜರ್ ಕೋಡ್ 1908 ರ ಆದೇಶ 26 ನಿಯಮ 10A ರ ಪ್ರಕಾರ, ಸಮೀಕ್ಷೆಯ ಸಮಯದಲ್ಲಿ ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಂಡುಬಂದಿರುವ ಶಿವಲಿಂಗದ ‘ವೈಜ್ಞಾನಿಕ ತನಿಖೆ’ಗೆ ನಿರ್ದೇಶಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದು ಹೇಳಿದ್ದರು.
