ಸಚಿವ ಆರ್.ಬಿ.ತಿಮ್ಮಾಪುರ : ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಸಪೋರ್ಟ್ ಇದೆ.

ಬಾಗಲಕೋಟೆ (ಜು.23): ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ನನಗೆ ಗೊತ್ತಿಲ್ಲ. ನಾನು ಹೇಳ್ತೀನಿ, ಶಾಸಕಾಂಗ ಪಕ್ಷದಲ್ಲಿರುವ ಎಲ್ಲ ಶಾಸಕರು ಸಿದ್ದರಾಮಯ್ಯರವರನ್ನು ಬೆಂಬಲಿಸುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ್ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಕಾಂಗ್ರೆಸ್‌ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್‌ ನೀಡಿರುವ ಹೇಳಿಕೆ ಕುರಿತು ಮಾತನಾಡಿದ ಅವರು, ನಮ್ಮ ಹೈಕಮಾಂಡ್ ಸಪೋರ್ಟ್ ಸಿದ್ದರಾಮಯ್ಯಗೆ ಇದೆ. ಈ ಎರಡು ಬೆಂಬಲದಿಂದ ಅವರಿಗೆ ಏನು ಆಗಲ್ಲ. ಇದು ಸುಮ್ಮನೇ ಮಾಧ್ಯಮಗಳ ಸೃಷ್ಟಿ.ಮೂರು ದಿನಗಳಿಂದ ಕುಟ್ಟಿದ್ದನ್ನೇ ಕುಟ್ತಿದ್ದೀರಿ ಎಂದು ಮಾಧ್ಯಮಗಳ ಕಡೆಗೆ ಬೊಟ್ಟು ಮಾಡಿದರು. ಅಲ್ಲದೇ ಇಷ್ಟೆಲ್ಲ ಗೊತ್ತಿದ್ದಾಗಲೂ, ಒಬ್ಬರ ಮಾತಿಗೆ ಇಷ್ಟು ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದು ತಿಮ್ಮಾಪೂರ ಹೇಳಿದರು.

ಸಿಎಂ ಆಯ್ಕೆ ಮಾಡೋದು ಹರಿಪ್ರಸಾದ್‌ ಅಲ್ಲ: ಮುಖ್ಯಮಂತ್ರಿ ಆಯ್ಕೆ ಮಾಡೋದು ಹರಿಪ್ರಸಾದ್‌ ಅಲ್ಲ. ಕಾಂಗ್ರೆಸ್‌ ಹೈಕಮಾಂಡ್‌ ಎಂದು ಸಚಿವ ಜಮೀರ್‌ ಅಹಮದ್‌ ತಿರುಗೇಟು ನೀಡಿದ್ದಾರೆ. ಪಟ್ಟಣದ ಗುಂಬಜ್‌ನಲ್ಲಿರುವ ಟಿಪ್ಪು ಸಮಾಧಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿಯನ್ನು ನಾನೂ ಆಯ್ಕೆ ಮಾಡೋಕೆ ಸಾಧ್ಯವಿಲ್ಲ. ಹರಿಪ್ರಸಾದ್‌ ಕೂಡ ಮಾಡೋಕೆ ಆಗೋಲ್ಲ. ನಮ್ಮ ಪಕ್ಷದಲ್ಲಿ ಸಿಎಂ ಆಯ್ಕೆ ಮಾಡುವ ಅಧಿಕಾರವಿರುವುದು ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿಗೆ ಮಾತ್ರ. ಹೈಕಮಾಂಡ್‌ ಆ ಬಗ್ಗೆ ನಿರ್ಧಾರ ಮಾಡುತ್ತದೆ.

ಮುಖ್ಯಮಂತ್ರಿ ಮಾಡುವುದೂ ಗೊತ್ತಿದೆ, ಇಳಿಸೋಕೂ ಗೊತ್ತಿದೆ ಎನ್ನುವುದಕ್ಕೆ ಇವರೇನು ವಿರೋಧಪಕ್ಷದಲ್ಲಿದ್ದಾರಾ. ನಮ್ಮ ವಿರುದ್ಧವೇ ಹೋರಾಟ ಮಾಡುತ್ತಾರಾ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ. ಯಾವ ಕಾರಣಕ್ಕೂ ಬದಲಾವಣೆ ಆಗುವುದಿಲ್ಲ ಎಂದು ಖಚಿತಪಡಿಸಿದ ಜಮೀರ್‌ ಅಹಮದ್‌, ಮಾಜಿ ಸಿಎಂ ಕುಮಾರಸ್ವಾಮಿ ಅವರ ರಾಜಕೀಯ ನಡೆಯ ಬಗ್ಗೆ ಕೇಳಿದಾಗ, ನಾನು ಆ ಬಗ್ಗೆ ಮಾತನಾಡುವುದಿಲ್ಲ. ಮೈತ್ರಿ ವಿಚಾರದ ಬಗ್ಗೆ ಅವರನ್ನೇ ಕೇಳಿ. ಏಕೆಂದರೆ, ಅದರ ಬಗ್ಗೆ ಮಾತನಾಡಲು ನಾನು ಆ ಪಕ್ಷದಲ್ಲಿ ಇಲ್ಲ, ಹಾಗಾಗಿ ಅದರ ಬಗ್ಗೆ ಮಾತಾಡಲ್ಲ. ನಾನು ಕಾಂಗ್ರೆಸ್‌ ಪಕ್ಷದಲ್ಲಿದ್ದೇನೆ. ಕಾಂಗ್ರೆಸ್‌ ಬಗ್ಗೆ ಮಾತನಾಡುತ್ತೇನೆ ಎಂದು ಪ್ರತಿಕ್ರಿಯಿಸಿದರು.

ಬಿ.ಕೆ. ಹರಿಪ್ರಸಾದ್‌ ನೋವು ಸರ್ಕಾರಕ್ಕೆ ಅಪಾಯಕಾರಿ: ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿ.ಕೆ. ಹರಿಪ್ರಸಾದ್‌ ಅವರ ಮಾತು, ನೋವು, ಚಟುವಟಿಕೆಗಳು ರಾಜ್ಯದಲ್ಲಿ ಆಳುವ ಕಾಂಗ್ರೆಸ್‌ ಸರ್ಕಾರಕ್ಕೆ ಅಪಾಯಕಾರಿಯಾಗಲಿವೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿ.ಕೆ. ಹರಿಪ್ರಸಾದ್‌ ಅವರ ಮಾತಿನ ಬಗ್ಗೆ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯ ಅವರಂತೆ ಬಿ.ಕೆ. ಹರಿಪ್ರಸಾದ್‌ ಅವರೂ ಮೇಲ್ಮನೆಯ ವಿಪಕ್ಷ ನಾಯಕರಾಗಿದ್ದರು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಹರಿಪ್ರಸಾದ್‌ ಕೂಡ ಶ್ರಮಿಸಿದ್ದಾರೆ. ವೈಚಾರಿಕವಾಗಿ ನನಗೂ ಅವರಿಗೂ ಬಹಳ ಅಭಿಪ್ರಾಯ ಭೇದವಿದೆ. ನಾವು ವೈಚಾರಿಕಾ ಚರ್ಚೆ, ಸಂಘರ್ಷ ಮಾಡಿದ್ದೇವೆ ಎಂದವರು ಹೇಳಿದ್ದಾರೆ.

Recent Articles

spot_img

Related Stories

Share via
Copy link