
ಸದ್ಯದ ಪರಿಸ್ಥಿತಿಗಳ ಬಗ್ಗೆ ಅವಲೋಕನ ಮಾಡಿದ ನರೇಂದ್ರ ಮೋದಿ ಪ್ರಮುಖ 3 ಅಂಶಗಳ ಬಗ್ಗೆ ಕೇಂದ್ರಿಕರಿಸಿ ತಯಾರಿ ಆರಂಭಿಸಲು ಸೂಚಿಸಿದ್ದಾರೆ. ಮುಖ್ಯವಾಗಿ ಮಧ್ಯಮ ವರ್ಗ, ಬಡವರು, ತುಳಿತಕ್ಕೊಳಗಾದ ಮತ್ತು ಹಿಂದುಳಿದ ಸಮುದಾಯಗಳ ಮಹತ್ವವನ್ನು ಗುರುತಿಸಿದ ಪ್ರಧಾನಿ ಮೋದಿ ಅವರ ಕಾಳಜಿ ಮತ್ತು ಆಕಾಂಕ್ಷೆಗಳನ್ನು ನೇರವಾಗಿ ಪರಿಹರಿಸುವ ಯೋಜನೆಗಳನ್ನು ರೂಪಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಸಂಸದರು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಸಂಸದೀಯ ಕ್ಷೇತ್ರಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು, ಆಯಾ ಕ್ಷೇತ್ರಗಳಲ್ಲಿ ಸಮಾಜದ ಹಿಂದುಳಿದ ಮತ್ತು ದುರ್ಬಲ ವರ್ಗಗಳ ಪ್ರತಿನಿಧಿಗಳ ನಡುವೆ ಸಣ್ಣ ಪ್ರಮಾಣದ ಸಭೆಗಳು ಮತ್ತು ಸೆಮಿನಾರ್ಗಳ ಮೂಲಕ ನೇರ ಸಂವಾದವನ್ನು ನಡೆಸಲು ಮೋದಿ ಶಿಫಾರಸು ಮಾಡಿದರು.
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗೆ ಮುಂಚಿತವಾಗಿ ಕ್ಷೇತ್ರಗಳ ಮತ್ತು ಸ್ಥಾನಗಳ ಸೂಕ್ಷ್ಮ ನಿರ್ವಹಣೆಗೆ ನೀಲನಕ್ಷೆಯನ್ನು ತಯಾರಿಸಲು, ಚುನಾವಣಾ ಪ್ರಯತ್ನಗಳನ್ನು ಸರಳಗೊಳಿಸಲು 543 ಲೋಕಸಭಾ ಸ್ಥಾನಗಳನ್ನು ಉತ್ತರ, ದಕ್ಷಿಣ ಮತ್ತು ಪೂರ್ವ ಎಂದು 3 ಭಾಗವಾಗಿ ವಿಂಗಡಿಸಲು ಮೋದಿ ಸೂಚಿಸಿದ್ದಾರೆ.
ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಜುಲೈ 6 ರಿಂದ 8 ರವರೆಗೆ ಪ್ರತಿ ಪ್ರದೇಶದ ಉನ್ನತ ನಾಯಕರೊಂದಿಗೆ ಸಭೆ ನಡೆಸಲು ಸೂಚಿಸಿದ್ದು, ಸಭೆಯಲ್ಲಿ ರಾಜ್ಯ ಉಸ್ತುವಾರಿಗಳು, ರಾಜ್ಯ ಘಟಕದ ಅಧ್ಯಕ್ಷರು, ರಾಜ್ಯ ಸಂಘಟನಾ ಕಾರ್ಯದರ್ಶಿಗಳು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಶಾಸಕರು, ಸಂಸದರು ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು ಭಾಗವಹಿಸಲು ನಿರ್ದೇಶಿಸಲಾಗಿದೆ.
ಕೇಂದ್ರ ಸಚಿವರು ತಮ್ಮ ಸಚಿವಾಲಯದಲ್ಲಿ ವಿಭಿನ್ನ ಯೋಜನೆಗಳ ಜಾರಿಗೆ ಪ್ರಯತ್ನಿಸಬೇಕು, ಹೊಸತನಕ್ಕೆ ಆದ್ಯತೆ ನೀಡಬೇಕು. ಸಮಾಜದ ಎಲ್ಲಾ ವರ್ಗಗಳಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸುವ ಮತ್ತು ಎಲ್ಲರನ್ನೂ ಒಳಗೊಳ್ಳುವ ಆಡಳಿತವನ್ನು ಉತ್ತೇಜಿಸುವ ಗುರಿ ಹೊಂದಬೇಕು ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.
#AGASTYA TIMES NEWS DESK
